ಚಿತಾದಂತ

ನಾನು  ಕೆ.ಎನ್. ಗಣೇಶಯ್ಯನವರ ಕಾದಂಬರಿ  ಓದಿದ್ದು  ಇದೇ  ಮೊದಲು. ಅವರ  ಕಾದಂಬರಿಗಳು,  ಹೇಳುವ  ಕಥೆಯೊಡನೆ  ಕೆಲವು  ಐತಿಹಾಸಿಕ ಘಟನೆಗಳ ಮೇಲೂ ಬೆಳಕು   ಚೆಲ್ಲುತ್ತದೆ  ಅಂತ  ಕೇಳಿದ್ದೆ . ಈ  ಕಾದಂಬರಿ  ಓದಿದ  ಮೇಲೆ  ಅದು  ನಿಜ  ಅನ್ನಿಸಿದೆ .                                            

ಮಾಮೂಲಿ  thriller ಕಾದಂಬರಿಗಳಂತೆಯೇ ಇಲ್ಲಿ ಒಂದು ಕೊಲೆ ಆಗುತ್ತೆ .  ಇಷ್ಟೇ  ಆಗಿದ್ದರೆ  ಅದರಲ್ಲೇನು  ವಿಶೇಷ  ಇರ್ಲಿಲ್ಲ .  ಆದರೆ  ಆ  ಕೊಲೆಯನ್ನು  ಬೇಧಿಸಲು  ಹೊರಟಾಗ  ದೊರೆಯುವ  ಕೆಲವು  ಐತಿಹಾಸಿಕ ಸತ್ಯಗಳು , ಸತ್ಯದಂತೆ  ಕಾಣುವ  ಮಿಥ್ಯಗಳು  ಕಾದಂಬರಿಯನ್ನು  ರಸವತ್ತಾಗಿಸುತ್ತವೆ.

ಅಲೆಕ್ಸಾನ್ದರ  ದಂಡ ಯಾತ್ರೆ , ಅವನು  ಬಚ್ಚಿಟ್ಟಿದ್ದಾನೆ ಎನ್ನಲಾದ  ನಿಧಿಗಳು , ಬುದ್ಧನ  ಹಲ್ಲಿನ  ರಹಸ್ಯ , ಬೌದ್ಧ  ಧರ್ಮದ  ಇತಿಹಾಸ , ಹೀಗೆ  ಹಲವಾರು  ವಿಷಯಗಳ  ಹಾಗೂ  ದಂತ  ಕಥೆಗಳ  ಸುತ್ತ  ಕಥೆ  ಸುತ್ತುತ್ತದೆ .  ಕನ್ನಡದಲ್ಲಿ  ಪ್ರಾಯಶಃ  ಇಂಥ  ಪ್ರಯತ್ನ  ಇದೆ  ಮೊದಲೇನೋ ! ಖಂಡಿತ  ಒಂದು  ಉತ್ತಮ  ಪ್ರಯತ್ನ , ಅದರಲ್ಲೂ  ನಿಮಗೆ  ಇತಿಹಾಸದಲ್ಲಿ  ಆಸಕ್ತಿ  ಇದ್ದರೆ, ಈ  ಕಾದಂಬರಿ  ಖಂಡಿತ  ಇಷ್ಟ  ಆಗುತ್ತದೆ.

Posted in ಪುಸ್ತಕಗಳು | Leave a comment

ನಾನೋದಿದ ಪುಸ್ತಕ

1) ಕವಲು : ಇದು ಎಸ್.ಎಲ್ .ಭೈರಪ್ಪ ನವರ ಬಹು ಇತ್ತೀಚಿಗಿನ ಕಾದಂಬರಿ (2010). 21 ನೇ ಶತಮಾನ ತಂದೊಡ್ಡುವ ಹಲವಾರು ಬದಲಾವಣೆಗಳು, ಅವುಗಳು ಮಾಡುವ ನಮ್ಮ ಕುಟುಂಬ-ವ್ಯವಸ್ಥೆಯ, ಸಂಸ್ಕೃತಿಯ ಮೇಲಿನ ದಾಳಿಗಳು ಇವನೆಲ್ಲಾ ನವಿರಾಗಿ ಒಂದು ಕಥೆಯ ಮೂಲಕ ಹೇಳಲಾಗಿದೆ. ಇದು ಭೈರಪ್ಪ ನವರ ಹಿಂದಿನ ಕಾದಂಬರಿ ‘ಆವರಣ’ ದಂತೆ ವಿವಾದಾತ್ಮಕವಾಗಲಿಲ್ಲ.

ಇದು ಮುಖ್ಯವಾಗಿ, ಸಂಸ್ಕೃತಿಗಳ ಘರ್ಷಣೆ (clash of civilizations),ಅದು ತಂದೊಡ್ಡುವ ಅಪಾಯಗಳು, ಬದಲಾವಣೆಗಳು, ಸ್ತ್ರೀವಾದದ ಪೊಳ್ಳುತನ, ಕಾನೂನಿಗೆ ಸ್ತ್ರೀಯರ ಬಗ್ಗೆ ಇರುವ ಮೃದು ನಿಲುವು, ಅದನ್ನು ದುರುಪಯೋಗಗೊಳಿಸುವ ಸ್ತ್ರೀವಾದಿಗಳು , ಅವರ-ಅವರ ವಾದಗಳ ಆಷಾಡಭೂತಿತನವೆಲ್ಲವನ್ನು ನಗ್ನವಾಗಿ ನಿರೂಪಿಸಲಾಗಿದೆ. ಹೇಗೆ ಭೈರಪ್ಪ ನವರನ್ನು ಮಿಥ್ಯ-ಜಾತ್ಯಾತೀತವಾದಿಗಳು ‘ಆವರಣ’ ಕ್ಕಾಗಿ ವಿರೋಧಿಸಿದ್ದರೋ, ಹಾಗೆ ಬಹುಷಃ ಸ್ವಾತಂತ್ರ-ಸ್ವೇಚ್ಚಾಚಾರ ಗಳ ವ್ಯತ್ಯಾಸ ತಿಳಿಯದ ಸ್ತ್ರೀವಾದಿಗಳು ‘ಕವಲು’ ವಿರೋಧಿಸಿದರೂ ಅಚ್ಚರಿ ಇಲ್ಲ. ಯಾರು ವಿರೋಧಿಸಿದರೂ, ವಿರೋಧಿಸದೆ ಇದ್ದರೂ ಸತ್ಯ ಮಿಥ್ಯವಾಗಲ್ಲ , ಮಿಥ್ಯ ಸತ್ಯವಾಗಲ್ಲ ಎಂಬುದು ಸತ್ಯವಷ್ಟೇ !

Posted in ಪುಸ್ತಕಗಳು | Leave a comment

ಒಮ್ಮೊಮ್ಮೆ ಹೀಗೂ ಆಗುವುದು !

ಒಂದು ಹಳೆಯ ಕನ್ನಡದ  ಹಾಡು ಶುರುವಾಗೋದೇ ಹೀಗೆ “ನಮ್ಮುರೇ ಚಂದ ನಮ್ಮುರೇ ಅಂದ ಕನ್ನಡ ಮಾತೇ ಕರ್ಣಾನಂದ”. ಆ ಮಾತು ಸತ್ಯ . ನಾವು  ಯಾವುದೇ  ಇತರ  ಭಾಷೆಯನ್ನು ಸುಲಲಿತವಾಗಿ  ಮಾತಾಡಬಹುದು , ಇತರ ಭಾಷೆಯಲ್ಲಿ ಸುಲಲಿತವಾಗಿ ಬರೆಯಬಹುದು, ಆದರೆ ನಮ್ಮ ಮಾತೃ ಭಾಷೆಯಲ್ಲಿನ ಅಭಿವ್ಯಕ್ತಿಯೇ ಬೇರೆ , ಅದನ್ನಾಡಿದಾಗ ಆಗುವ ಆನಂದವೇ ಬೇರೆ. ಹಾಗೆಯೇ ನಾವು ಎಷ್ಟೇ ಪರಸ್ಥಳಗಳಿಗೆ, ಪರದೇಶಗಳಿಗೆ ಹೋಗಬಹುದು ಆದರೆ ನಮ್ಮ ನೆಲದಲ್ಲಿ ಸಿಗುವ ಆನಂದ ಅಪರಿಮಿತ. ಇಲ್ಲದಿದ್ದರೆ ,ಹಣ ಸಂಪಾದನೆಗೋ,ಅಥವಾ  ಕೀರ್ತಿ ಸಂಪಾದನೆಗೋ ವಿದೇಶಕ್ಕೆ ಹೋಗುವ ಎಷ್ಟೋ ಜನ ,ಕಡೆಯ ಪಕ್ಷ ಅವರ ಜೀವನದ ಸಂಧ್ಯಾಕಾಲಕ್ಕೆ  ತಮ್ಮ ನೆಲದಲ್ಲೇ ನೆಲೆ ನಿಲ್ಲಲು  ಬಯಸುತ್ತಿರಲ್ಲಿಲ್ಲ .ಮಣ್ಣಿನ ಮಹತ್ವ ಹೆಚ್ಚು ಅರಿವಾಗುವುದೇ ಅದರಿಂದ ದೂರವಿದ್ದಾಗ .

ಹೀಗೆ  ನನ್ನ ಯೋಚನೆಗಳು ಸಾಗಿದ್ದವು . ನಾನು ಸುಮಾರು ಎರಡು ವರ್ಷಗಳಿಂದೀಚೆಗೆ ನನ್ನ  ಬ್ಲಾಗ್ Englishನಲ್ಲಿ ಬರೆಯುತ್ತಿದ್ದೇನೆ .ಅದು ತಕ್ಕ ಮಟ್ಟಿನ ಜನರಿಗೆ ತಲುಪಿದೆ. ನನ್ನ ಸುಮಾರು ಸ್ನೇಹಿತರಿಗಂತೂ ತಲುಪಿದೆ .ಅದರಲ್ಲಿ ಕನ್ನಡದ ವಿಷಯಗಳನ್ನು accomodate ಮಾಡುವ ಬದಲು ,ಕನ್ನಡಕ್ಕೆ  ಒಂದು ಬ್ಲಾಗ್ ಮೀಸಲಿಟ್ಟರೆ ಚೆನ್ನ ಅಂತ ,ಇಂದಿನಿಂದ ಈ ಬ್ಲಾಗ್ ಶುರು ಮಾಡ್ತಾ ಇದೀನಿ. ಕನ್ನಡ ಹಾಗು  ಕರ್ನಾಟಕದ ಬಗ್ಗೆ ಹೇಳುವುದಕ್ಕೆ ಹಲವಾರು ವಿಷಯಗಳು ಇವೆ . ಅವೆಲ್ಲದರ ಜೊತೆಗೆ ಇನ್ನೂ ಹಲವಾರು  ವಿಷಯದ ಬಗ್ಗೆ ಚರ್ಚಿಸೋಣ.ಮತ್ತೆ ಭೇಟಿಯಾಗೋಣ!

Posted in ಮೊದಲ ಸಲ | Leave a comment